Tuesday, October 13, 2009

ಮಳೆ ನಿಂತು ಹೋದ ಮೇಲೆ.....

ಹುಯ್ಯೋ ಹುಯ್ಯೋ ಮಳೆರಾ...ಅಂತ ಪ್ರತಿ ವರ್ಷ ಗೋಳಿಡುತ್ತಿದ್ದ ಉತ್ತರ ಕರ್ನಾಟಕದ ಜನತೆ ಇಂದು "ಯಾಕಪ್ಪಾ ಈ ಕೋಪ ನಮ್ಮ ಮೇಲೆ ಮಳೆರಾಯ..?"ಎಂದು ಕಣ್ಣೀರು ಸುರಿಸುತ್ತಿದ್ದಾರೆ.ಮಳೆಗಾಲದ ಆರಂಭದಲ್ಲಿ ಭೀಕರ ಬಿಸಿಲು.ಬೆಳೆ ಕೈಗೆ ಬರುವ ಸಮಯದಲ್ಲಿ ಭಯಂಕರ ಪ್ರವಾಹ.ಇವತ್ತು ಅವರ ಬದುಕು ಆ ದೇವರಿಗೇ ಪ್ರೀತಿ.
ಕೃಷ್ಣೆ ,ತುಂಗಭದ್ರೆಯರು ಉಕ್ಕಿ ಹರಿದ ಪರಿಣಾಮ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಆ ಜನಸ್ತೋಮದ ಸಣ್ಣ ಚಿತ್ರಣ ಈ ಫೋಟೋಗಳನ್ನು ನೋಡಿದರೆ ನಮಗೆ ಸಿಗುತ್ತದೆ. ಬಡವನ ಅರಮನೆ ಈಗ ಮಳೆ ಮುಗಿದ ಮೇಲೆ "ಅರಮನೆ"ಯೇ ಆಗಿದೆ.ಆ ಮುರುಕಲು ಗೋಡೆ,ಕೆಸರು ಮಣ್ಣಿನ ಮಧ್ಯೆ ಬದುಕು ಹುಡುಕುತ್ತಿದ್ದಾರೆ.
ಈ ಮೇಲಿನ ಫೋಟೋಗಳನ್ನು ನೋಡಿದರೆ ಪ್ರಾಚ್ಯಶಾಸ್ತ್ರ ಅಧ್ಯಯನ ಸಂಸ್ಥೆಯವರು ಉತ್ಕನನ ಮಾಡುತ್ತಿರುವಂತೆ ಕಾಣುತ್ತದೆ.ಆದರೆ ಈ ಜನ ಹುಡುಕುತ್ತಿರುವುದು ಪ್ರವಾಹದಲ್ಲಿ ಮುರಿದು ಬಿದ್ದು ಹಾಳಾದ ಮನೆಗಳ ಕೆಳಗೆ ತಮ್ಮ ಬದುಕನ್ನು.ಬಡ ರೈತರ ಈ ಬವಣೆ ನೋಡಿದರೆ ಎಂತವರ ಕಣ್ಣಲ್ಲೇ ಆದರು ಒಂದು ಹನಿ ನೀರು ಬರದೇ ಇರಲಾರದು.ನಮ್ಮಂತ ನಗರವಾಸಿಗಳಿಗೆ ಮೂರು ಹೊತ್ತು ಹೊಟ್ಟೆಗೆ ಹಿಟ್ಟು ಕೊಡುತ್ತಿದ್ದ ನಮ್ಮಪ್ಪ ಅನ್ನದಾತ ಇಂದು ತಾನೆ ಹೊಟ್ಟೆಗಿಲ್ಲದೆ ಒದ್ದಾಡುವಂತಾಗಿದೆ.ಬಿಜಾಪುರ,ಗುಲ್ಬರ್ಗ,ರಾಯಚೂರು,ಬಳ್ಳಾರಿ,ದಾವಣಗೆರೆ,ಧಾರವಾಡ ಹೀಗೆ ಸಂಪೂರ್ಣ ಉತ್ತರ ಕರ್ನಾಟಕ ಮಳೆಯಲ್ಲಿ ಕೊಚ್ಚಿ ಹೋಗಿದೆ.ತನಗೆ ಅನ್ನ ಕೊಡುತ್ತಿದ್ದ ದೈವಕ್ಕೆ ಸಹಾಯ ಮಾಡಲು ಕರ್ನಾಟಕದ ಜನತೆ ಮುಂದಾಗಿದೆ.
ಮಕ್ಕಳಾದಿಯಾಗಿ ವಯೋವೃದ್ದರ ತನಕ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.ಬಟ್ಟೆಬರೆ,ದವಸಧಾನ್ಯ,ಸೋಪು,ಕುಡಿಯುವ ನೀರು ಹೀಗೆ ಎಲ್ಲವನ್ನು ತುಂಬಿಸಿ ತುಂಬಿಸಿ ಕಳಿಸುತ್ತಿದ್ದಾರೆ.ಇಂದಿಗೂ ಜನರಲ್ಲಿ ಇಷ್ಟರ ಮಟ್ಟಿಗೆ ಸಹಾಯ ಮಾಡುವ ಗುಣ ಉಳಿದಿದೆ.ಅಲ್ಲಿಯ ಜನರ ಹೃದಯ ತುಂಬಿದ ಮಾತು ನಮಗೆ ಸಾಕು,ಒಂದು ಸಾರ್ತಕ್ಯ ಭಾವ ಕೊಡಲು.ಮೇಲೆ ಹಾಳಾದ ನಮ್ಮ ಜನರ ಬದುಕಿನ ಫೋಟೋವನ್ನು ನೋಡಿ,ಕೆಳಗೆ ಹರಿದು ಬಂದ ರಾಶಿ ರಾಶಿ ಸಹಾಯದ ಫೋಟೋವನ್ನು ನೋಡಿ.ಕೇವಲ ನೋಡಿ ಒಂದು ನಿಟ್ಟುಸಿರು ಕೊಡುವ ಬದಲು ಕೈಲಾದ ಸಹಾಯ ಮಾಡಿ...ಆಗ ಬರೆದ ನನಗೂ ಓದಿದ ನಿಮಗೂ ಇಬ್ಬರಿಗೂ ಮನೋತೃಪ್ತಿ ಸಿಗುವುದು....ಅಲ್ಲವೇ?